ದಬಂಗ್ (ಅನುವಾದ: ನಿರ್ಭೀತ) ೨೦೧೦ರ ಒಂದು ಹಿಂದಿ ಸಾಹಸಮಯ ಹಾಸ್ಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಅಭಿನವ್ ಕಶ್ಯಪ್ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಅರ್ಬಾಜ಼್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮಲಾಯ್ಕಾ ಅರೋರಾ ಹಾಗೂ ಅರ್ಬಾಜ಼್ ಖಾನ್ ಮತ್ತು ಶ್ರೀ ಅಷ್ಟವಿನಾಯಕ್ ಸಿನೆ ವಿಝನ್ ಲಿ. ಅಡಿಯಲ್ಲಿ ಢಿಲ್ಲಿನ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಸಲ್ಮಾನ್‌ ಖಾನ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಸೊನಾಕ್ಷಿ ಸಿನ್ಹಾ ತಮ್ಮ ಪ್ರಥಮ ಪ್ರವೇಶವನ್ನು ಮಾಡಿದರು. ಅರ್ಬಾಜ಼್, ಓಂ ಪುರಿ, ಡಿಂಪಲ್ ಕಪಾಡಿಯಾ, ವಿನೋದ್ ಖನ್ನಾ, ಅನುಪಮ್ ಖೇರ್, ಮಹೇಶ್ ಮಾಂಜ್ರೇಕರ್ ಮತ್ತು ಮಾಹಿ ಗಿಲ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸೋನು ಸೂದ್ ಮುಖ್ಯ ಖಳನಾಯಕನ ಪಾತ್ರವನ್ನು ವಹಿಸಿದ್ದಾರೆ. ಇದು ನಿರ್ಮಾಪಕರಾಗಿ ಅರ್ಬಾಜ಼್‍ರ ಮತ್ತು ನಿರ್ದೇಶಕರಾಗಿ ಕಶ್ಯಪ್‍ರ ಪ್ರಥಮ ಪ್ರವೇಶವಾಗಿದೆ. ಮಲಾಯ್ಕಾ ಅರೋರಾ ಐಟಂ ನಂಬರ್ ಆದ "ಮುನ್ನಿ ಬದನಾಮ್ ಹುಯಿ" ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ದಬಂಗ್ ಉತ್ತರ ಪ್ರದೇಶ ರಾಜ್ಯದಲ್ಲಿ ಹಿನ್ನೆಲೆ ಹೊಂದಿದೆ ಮತ್ತು ಭಯವಿಲ್ಲದ ಒಬ್ಬ ಪೋಲಿಸ್ ಅಧಿಕಾರಿ ಚುಲ್‍ಬುಲ್ ಪಾಂಡೆ ಮತ್ತು ತನ್ನ ಮಲತಂದೆ ಹಾಗೂ ಮಲಸೋದರನೊಂದಿಗೆ ಅವನ ಕ್ಷೋಭೆಯುಳ್ಳ ಸಂಬಂಧದ ಕಥೆಯನ್ನು ಹೇಳುತ್ತದೆ. ₹300 ದಶಲಕ್ಷದ ಬಂಡವಾಳದಲ್ಲಿ ತಯಾರಾದ ಮತ್ತು ₹120 ದಶಲಕ್ಷದಲ್ಲಿ ಮಾರಾಟವಾದ ದಬಂಗ್ ಪ್ರಧಾನವಾಗಿ ಮಹಾರಾಷ್ಟ್ರದ ವಾಯ್ ಪಟ್ಟಣದಲ್ಲಿ ಚಿತ್ರೀಕರಣಗೊಂಡಿತು. ಇತರ ಪ್ರಧಾನ ದೃಶ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಚಿತ್ರೀಕರಿಸಲಾಯಿತು. ದಬಂಗ್ ೧೦ ವಿಶ್ವಾದ್ಯಂತ ಸೆಪ್ಟೆಂಬರ್ ೨೦೧೦ರಂದು ಬಿಡುಗಡೆಯಾಯಿತು. ಇದು ಬಹುತೇಕ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ವಿಶ್ವಾದ್ಯಂತ ₹೨.೧೯ ಬಿಲಿಯನ್‍ನಷ್ಟು ಹಣಗಳಿಸಿತು. ಇದು ೨೦೧೦ರಲ್ಲಿ ಅತ್ಯಂತ ಹೆಚ್ಚು ಹಣಗಳಿಸಿದ ಬಾಲಿವುಡ್ ಚಿತ್ರವಾಗಿದೆ. ದಬಂಗ್ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ—ಹಿತಕರ ಮನೋರಂಜನೆ ಒದಗಿಸುವ ಅತ್ಯಂತ ಜನಪ್ರಿಯ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚಲನಚಿತ್ರ ಹಾಗೂ ಮಹಿಳೆಯ ಅತ್ಯುತ್ತಮ ಪ್ರಥಮ ಪ್ರವೇಶ (ಸಿನ್ಹಾ) ಸೇರಿದಂತೆ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು. ನಂತರ ಇದನ್ನು ತಮಿಳಿನಲ್ಲಿ ಓಸ್ಥೆ ಎಂದು ಮತ್ತು ತೆಲುಗಿನಲ್ಲಿ ಗಬ್ಬರ್ ಸಿಂಗ್ ಎಂದು ರೀಮೇಕ್ ಮಾಡಲಾಯಿತು. ಆಮೇಲೆ ಈ ಚಿತ್ರದ ಎರಡು ಉತ್ತರಭಾಗಗಳು ಬಂದವು: ದಬಂಗ್-೨ (2012) ಮತ್ತು ದಬಂಗ್ 3 (2019). ಇದರಲ್ಲಿ ಕೊನೆಯದು ಭಾಗಶಃ ಉತ್ತರಭಾಗವಾಗಿ ಕಾರ್ಯನಿರ್ವಹಿಸಿ ಸ್ವತಃ ದಬಂಗ್‍ನ ಘಟನೆಗಳನ್ನು ರೂಪಿಸಿದ ಹಿನ್ನೋಟವನ್ನು ನಿರೂಪಿಸುತ್ತದೆ. == ಕಥಾವಸ್ತು == ಒಬ್ಬ ಹುಡುಗನಾದ ಚುಲ್‍ಬುಲ್ ಪಾಂಡೆ ತನ್ನ ಮಲತಮ್ಮ ಮಕ್ಖನ್‍ಚಂದ್ "ಮಕ್ಖಿ" ಪಾಂಡೆ, ಮಲತಂದೆ ಪ್ರಜಾಪತಿ ಪಾಂಡೆ ಮತ್ತು ತಾಯಿ ನೆಯ್ನಾ ದೇವಿಯೊಂದಿಗೆ ಉತ್ತರ ಪ್ರದೇಶದ ಲಾಲ್‍ಗಂಜ್‍ನಲ್ಲಿ ವಾಸಿಸುತ್ತಿರುತ್ತಾನೆ. ಅವನು ಪ್ರಜಾಪತಿ ಮತ್ತು ಮಕ್ಖಿಯೊಂದಿಗೆ ಅಸಂತೋಷವುಳ್ಳ ಸಂಬಂಧವನ್ನು ಹೊಂದಿರುತ್ತಾನೆ. ೨೧ ವರ್ಷಗಳ ನಂತರ, ಚುಲ್‍ಬುಲ್ ಪೋಲೀಸಿನವನಾಗುತ್ತಾನೆ. ತನ್ನನ್ನು "ರಾಬಿನ್ ಹುಡ್" ಪಾಂಡೆ ಎಂದು ಕರೆದುಕೊಳ್ಳುವ ಚುಲ್‍ಬುಲ್ ಈಗಲೂ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುತ್ತಾನೆ. ಮಕ್ಖಿ ನಿರ್ಮಲಾಳನ್ನು ಪ್ರೀತಿಸುತ್ತಿರುತ್ತಾನೆ. ಅವಳ ತಂದೆ ಈ ಸಂಬಂಧವನ್ನು ವಿರೋಧಿಸುತ್ತಾನೆ. ಎನ್‍ಕೌಂಟರಾಗಿ ಅಂತ್ಯಗೊಳ್ಳುವ ಒಂದು ಪೋಲಿಸ್ ಬೆನ್ನಟ್ಟುವಿಕೆಯ ವೇಳೆ ಚುಲ್‍ಬುಲ್ ರಜ್ಜೊ ಎಂಬ ಹೆಸರಿನ ಹುಡುಗಿಯನ್ನು ಭೇಟಿಯಾಗಿ ಪ್ರೀತಿಸತೊಡಗುತ್ತಾನೆ. ಛೇದಿ ಸಿಂಗ್ ಎಂಬ ಹೆಸರಿನ ಒಬ್ಬ ಭ್ರಷ್ಟ ರಾಜಕೀಯ ನಾಯಕನು ಚುಲ್‍ಬುಲ್‍ನನ್ನು ಭೇಟಿಯಾಗುತ್ತಾನೇ. ಶೀಘ್ರವೇ ಇಬ್ಬರೂ ವೈರಿಗಳಾಗುತ್ತಾರೆ. ನಿರ್ಮಲಾಳೊಂದಿಗೆ ತನ್ನ ವಿವಾಹವನ್ನು ಗೊತ್ತುಮಾಡುವಂತೆ ಮಕ್ಖಿ ಪ್ರಜಾಪತಿಯನ್ನು ಕೇಳಿಕೊಳ್ಳುತ್ತಾನೆ. ತನ್ನ ಕಾರ್ಖಾನೆಯನ್ನು ಕಟ್ಟಿಸಲು ತೆಗೆದುಕೊಂಡ ಸಾಲಗಳನ್ನು ತೀರಿಸಲು ತನಗೆ ಹಣ ಬೇಕಾಗಿರುವ ಕಾರಣ ಪ್ರಜಾಪತಿ ನಿರಾಕರಿಸುತ್ತಾನೆ. ಅವನ ಮಗ ಒಬ್ಬ ಶ್ರೀಮಂತ ಹುಡುಗಿಯನ್ನು ಮದುವೆಯಾಗುವ ಮೂಲಕ ತಾನು ಹಣ ಗಳಿಸಬಹುದೆಂದು ನಂಬಿರುತ್ತಾನೆ. ಹಣದ ಉತ್ಕಟ ಅಗತ್ಯದಿಂದ, ಮಕ್ಖಿ ಚುಲ್‍ಬುಲ್‍ನ ಅಲಮಾರುವಿನಿಂದ ಸ್ವಲ್ಪ ಹಣವನ್ನು ಕದ್ದು ನಿರ್ಮಲಾಳನ್ನು ಮದುವೆಯಾಗಲು ತನಗೆ ಅನುಮತಿ ಕೊಡುವ ಭರವಸೆಯಿಂದ ಮಾಸ್ಟರ್ಜಿಗೆ ಕೊಡುತ್ತಾನೆ. ಈ ನಡುವೆ, ಚುಲ್‍ಬುಲ್ ರಜ್ಜೊಳನ್ನು ಭೇಟಿಯಾಗಿ ಮದುವೆಯನ್ನು ಪ್ರಸ್ತಾಪಿಸುತ್ತಾನೆ. ತಾನು ತನ್ನ ಕುಡುಕ ಅಪ್ಪನಾದ ಹರಿಯಾನನ್ನು ನೋಡಿಕೊಳ್ಳಬೇಕಿರುವುದರಿಂದ ಅವಳು ನಿರಾಕರಿಸುತ್ತಾಳೆ. ಚುಲ್‍ಬುಲ್ ಮನೆಗೆ ಹಿಂತಿರುಗಿದಾಗ ಅವನ ಅಮ್ಮ ನೆಯ್ನಾ ದೇವಿ ಮೃತಳಾಗಿರುತ್ತಾಳೆ. ಕುಟುಂಬದವನಾಗಿ ಪ್ರಜಾಪತಿ ಒಬ್ಬನೇ ಉಳಿದಿರುವುದರಿಂದ ಅವನು ಅವನ ಮನೆಗೆ ಜಗಳವನ್ನು ಅಂತ್ಯಗೊಳಿಸಲು ಹೋಗುತ್ತಾನೆ. ಆದರೆ ಪ್ರಜಾಪತಿ ನಿರಾಕರಿಸಿ ಅವನನ್ನು ಬಹಿಷ್ಕೃತನೆಂದು ಉಪೇಕ್ಷಿಸುತ್ತಾನೆ. ನಿರ್ಮಲಾಳೊಂದಿಗಿನ ತನ್ನ ಮದುವೆಗೆ ಮಕ್ಖಿ ಚುಲ್‍ಬುಲ್‍ನನ್ನು ಆಹ್ವಾನಿಸುತ್ತಾನೆ. ಚುಲ್‍ಬುಲ್ ರಜ್ಜೊಳ ವಿವಾಹ ಮಾಡಿಕೊಡುವಂತೆ ಹರಿಯಾನ ಮನವೊಲಿಸುತ್ತಾನೆ. ತಾನು ಜೀವಂತವಿರುವವರೆಗೆ ರಜ್ಜೊ ಯಾರನ್ನೂ ಮದುವೆಯಾಗುವುದಿಲ್ಲವೆಂದು ತಿಳಿದು ಹರಿಯಾ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಚುಲ್‍ಬುಲ್ ರಜ್ಜೊಳನ್ನು ಮಕ್ಖಿಯ ಉತ್ಸಾಹಭರಿತ ಮದುವೆಗೆ ಕರೆದುಕೊಂಡು ಹೋಗುತ್ತಾನೆ. ಮದುವೆಗೆ ಹಣ ಒದಗಿಸಲು ಮಕ್ಖಿ ತನ್ನ ಹಣವನ್ನು ಕದ್ದಿದ್ದಾನೆಂದು ಅರಿವಾಗಿ, ಚುಲ್‍ಬುಲ್ ರಜ್ಜೊಳನ್ನು ಒಂದು ಧಿಡೀರ್ ಸಮಾರಂಭದಲ್ಲಿ ಮದುವೆಯಾಗುತ್ತಾನೆ. ಮಾಸ್ಟರ್ಜಿಗೆ ಅಪಮಾನವೆನಿಸಿ ನಿರ್ಮಲಾಳೊಂದಿಗೆ ಮಕ್ಖಿಯ ಮದುವೆಯನ್ನು ರದ್ದುಮಾಡುತ್ತಾನೆ. ಒಂದು ಸಣ್ಣ ಅವಘಡದ ಕಾರಣ ಮಕ್ಖಿ ತನ್ನ ಕಾರ್ಖಾನೆಯಲ್ಲಿನ ಒಬ್ಬ ಕಾರ್ಮಿಕನಿಗೆ ಬಹಳ ಹೊಡೆಯುತ್ತಾನೆ. ಆ ಕಾರ್ಮಿಕನು ದೂರು ದಾಖಲಿಸಲು ತನ್ನ ಅಮ್ಮನೊಂದಿಗೆ ಪೋಲಿಸ್ ಠಾಣೆಗೆ ಹೋಗುತ್ತಾನೆ. ಮಕ್ಖಿಯನ್ನು ಅವಮಾನಗೊಳಿಸಲು ಚುಲ್‍ಬುಲ್ ಅವನನ್ನು ಜನರ ಮಧ್ಯೆ ಹೊಡೆಯುತ್ತಾನೆ. ಛೇದಿ ಈ ಪರಿಸ್ಥಿತಿಯ ಲಾಭ ಪಡೆದು ಮಕ್ಖಿಯನ್ನು ಪ್ರಜಾಪತಿ ಜೊತೆಗೆ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗುತ್ತಾನೆ. ಚುಲ್‍ಬುಲ್‍ನಿಂದ ಕ್ಷಮೆ ಪಡೆದು ಪ್ರಜಾಪತಿ ಪರಿಸ್ಥಿತಿಯನ್ನು ಬಗೆಹರಿಸುತ್ತಾನೆ. ಆದರೆ ಆಗಲೂ ಚುಲ್‍ಬುಲ್ ತನ್ನ ಸೋದರನಿಗೆ ಅಪಮಾನದ ರೂಪವಾಗಿ ಕಪಾಳಕ್ಕೆ ಹೊಡೆಯುತ್ತಾನೆ. ಛೇದಿಯನ್ನು ಇಷ್ಟಪಡದಿರುವ ಒಬ್ಬ ಸ್ಥಳೀಯ ರಾಜಕೀಯ ನಾಯಕನಾದ ದಯಾಲ್ ಸಾಹು ಉರುಫ್ ದಯಾಲ್ ಬಾಬುನನ್ನು ಚುಲ್‍ಬುಲ್ ಭೇಟಿಯಾಗುತ್ತಾನೆ. ಅವನ ಸಹಾಯದಿಂದ, ಚುಲ್‍ಬುಲ್ ಛೇದಿಯ ಸಾರಾಯಿ ಭಟ್ಟಿಗಳಿಗೆ ಕಲಬೆರಕೆ ಮಾಡಿ ಅದಕ್ಕಾಗಿ ಅವನ ಮೇಲೆ ತಪ್ಪಾಗಿ ಸುಳ್ಳು ಆಪಾದನೆ ಹೊರಿಸುತ್ತಾನೆ. ಸೇಡು ತೀರಿಸಿಕೊಳ್ಳಲು, ಛೇದಿ ಮಕ್ಖಿಯ ಕಾರ್ಖಾನೆಯನ್ನು ಸುಡುತ್ತಾನೆ. ಆಘಾತಗೊಂಡ ಪ್ರಜಾಪತಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿಕೊಳ್ಳುತ್ತಾನೆ. ಇದಕ್ಕೆ ಛೇದಿ ಕಾರಣವೆಂದು ತಿಳಿಯದೆ ಮಕ್ಖಿ ಸಹಾಯಕ್ಕಾಗಿ ಅವನ ಬಳಿ ಹೋಗುತ್ತಾನೆ. ಅವನು ದಯಾಲ್ ಬಾಬುನ ಮನೆಗೆ ಮಾವಿನಹಣ್ಣುಗಳ ಒಂದು ಪೆಟಾರಿಯನ್ನು ಕೊಟ್ಟುಬಂದರೆ ತಾನು ಪ್ರಜಾಪತಿಯ ಚಿಕಿತ್ಸೆ ಖರ್ಚನ್ನು ಕೊಡುವುದಾಗಿ ಹೇಳುತ್ತಾನೆ. ಮಕ್ಖಿಗೆ ಗೊತ್ತಿಲ್ಲದೆಯೇ, ಛೇದಿ ಆ ಪೆಟಾರಿಯೊಳಗೆ ಒಂದು ಬಾಂಬ್‍ನ್ನು ಇಟ್ಟಿರುತ್ತಾನೆ. ಅವನು ಹೊರಟ ಮೇಲೆ ಅದು ಸ್ಫೋಟಗೊಂಡು ದಯಾಲ್ ಬಾಬು ಸಾಯುತ್ತಾನೆ. ಛೇದಿ ಮಕ್ಖಿಗೆ ಚುಲ್‍ಬುಲ್‍ನನ್ನು ಸಾಯಿಸುವ ಕೆಲಸವನ್ನು ಕೊಡುತ್ತಾನೆ. ಮಕ್ಖಿ ಒಪ್ಪುತ್ತಾನೆ, ಆದರೆ ಅದನ್ನು ಚುಲ್‍ಬುಳ ಬಳಿ ಹೇಳಿಕೊಂಡು ಬಿಡುತ್ತಾನೆ. ಛೇದಿ ತನಗೆ ಗೊತ್ತಿಲ್ಲದೆಯೇ ಬಾಂಬ್‍ನ್ನು ಇಡುವಂತೆ ಮಾಡಿದನು ಎಂದು ಚುಲ್‍ಬುಲ್ ಎದುರು ಹೇಳುತ್ತಾನೆ. ಚುಲ್‍ಬುಲ್ ಅವನನ್ನು ಕ್ಷಮಿಸಿ ಅವನೊಂದಿಗೆ ರಾಜಿ ಮಾಡಿಕೊಳ್ಳುತ್ತಾನೆ. ಚುಲ್‍ಬುಲ್ ಮತ್ತು ಛೇದಿ ನಡುವಿನ ಅಂತಿಮ ಹೊಡೆದಾಟದ ವೇಳೆ, ನೆಯ್ನಿಯನ್ನು ಸಾಯಿಸಿದ್ದು ಛೇದಿ ಎಂದು ಮಕ್ಖಿ ಚುಲ್‍ಬುಲ್‍ ಎದುರು ಬಹಿರಂಗಪಡಿಸುತ್ತಾನೆ. ಕೋಪಗೊಂಡ ಚುಲ್‍ಬುಲ್ ಛೇದಿಯನ್ನು ಉಸಿರುಗಟ್ಟಿಸಿ ಸಾಯಿಸುತ್ತಾನೆ. ನಂತರ, ಚುಲ್‍ಬುಲ್ ಅವಳ ತಂದೆಯ ಉಪಸ್ಥಿತಿಯಲ್ಲಿ ನಿರ್ಮಲಾಳೊಂದಿಗೆ ಮಕ್ಖಿಯ ಮದುವೆಯನ್ನು ಮಾಡುತ್ತಾನೆ. ತಾನು ಗರ್ಭಿಣಿ ಎಂದು ರಜ್ಜೊ ಹೇಳುತ್ತಾಳೆ. == ಪಾತ್ರವರ್ಗ == == ತಯಾರಿಕೆ == === ಪಾತ್ರಹಂಚಿಕೆ === ತಮ್ಮ ಸೋದರನೊಂದಿಗೆ ಚರ್ಚಿಸಿ ಸಲ್ಮಾನ್ ಮೀಸೆಯನ್ನು ಬೆಳೆಸಿದರು ಮತ್ತು ಪಾತ್ರಕ್ಕೆ ಸೂಕ್ತವಾಗುವಂತೆ ತಮ್ಮ ಕೂದಲನ್ನು ಸಿದ್ಧಪಡಿಸಿಕೊಂಡರು. ಮೀಸೆಗಾಗಿ, ಚಿತ್ರೀಕರಣದ ಆರಂಭದ ಮೊದಲು ನಾಲ್ಕು ತಿಂಗಳು ಕಾಲ ಸುಮಾರು ಐವತ್ತು ಶೈಲಿಗಳನ್ನು ಪರೀಕ್ಷಿಸಬೇಕಾಯಿತು. ಅವರ ನೋಟವನ್ನು ಅಂತಿಮಗೊಳಿಸಲು ಛಾಯಾಚಿತ್ರಗಳನ್ನು ತೆಗೆಯಲಾಯಿತು. ಚುಲ್‍ಬುಲ್ ಪಾಂಡೆ ಪಾತ್ರಕ್ಕಾಗಿ ಕಶ್ಯಪ್ ಮೊದಲು ಕೆಲವು ಇತರರನ್ನು ಪರಿಗಣಿಸಿದ್ದರು ಆದರೆ ಅಂತಿಮವಾಗಿ ಸಲ್ಮಾನ್‌ರನ್ನು ಆಯ್ಕೆಮಾಡಿದರು. ಅರ್ಬಾಜ಼್‍ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವರನ್ನು ಕಶ್ಯಪ್ ಸಮೀಪಿಸಿದರು. ಅದನ್ನು ಓದಿದ ಮೇಲೆ, ಅರ್ಬಾಜ಼್ ತಕ್ಷಣ ಅದನ್ನು ನಿರ್ಮಿಸಿ ಅದರಲ್ಲಿ ನಟಿಸಲು ಒಪ್ಪಿಕೊಂಡರು. ಮುಖ್ಯ ಖಳನಾಯಕನ ಪಾತ್ರಕ್ಕಾಗಿ ಸೋನು ಸೂದ್‍ರನ್ನು ಆಯ್ಕೆಮಾಡಲಾಯಿತು. ಸಿನ್ಹಾರ ಪಾತ್ರದ ಅಪ್ಪನ ಪಾತ್ರಕ್ಕೆ ಮಹೇಶ್ ಮಾಂಜ್ರೇಕರ್‌ರನ್ನು ಸಮೀಪಿಸಲಾಯಿತು. ಎಪ್ರಿಲ್ ೨೦೦೯ರಲ್ಲಿ, ಸೋನಾಕ್ಷಿ ಸಿನ್ಹಾ ತಮ್ಮ ಚೊಚ್ಚಲ ಪಾತ್ರಕ್ಕೆ ಸಹಿ ಹಾಕಿದರು. ಈ ಪಾತ್ರವನ್ನು ಅವರ ಬಳಿ ಸಲ್ಮಾನ್ ಪ್ರಸ್ತಾಪಿಸಿದರು. ಸೋನಾಕ್ಷಿ ಈ ಪಾತ್ರಕ್ಕಾಗಿ ಸುಮಾರು ಎರಡು ವರ್ಷ ಕಾಲದಲ್ಲಿ ೩೦ ಕೆ.ಜಿ. ತೂಕವನ್ನು ಇಳಿಸಿಕೊಂಡರು. === ಚಿತ್ರೀಕರಣ === ದಬಂಗ್‍ನ ಚಿತ್ರೀಕರಣವು ಮುಖ್ಯವಾಗಿ ವಾಯ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಿತು. ಚಿತ್ರೀಕರಣವು ಸೆಪ್ಟೆಂಬರ್ ೨೦೦೯ರಲ್ಲಿ ಆರಂಭವಾಯಿತು. ನಿರ್ಮಾಣ ವಿನ್ಯಾಸಕ ವಸೀಕ್ ಖಾನ್ ಚಿತ್ರದಲ್ಲಿನ ಪ್ರತಿ ರಂಗಸಜ್ಜನ್ನು ವಿವರಿಸಲು ೧೦೦ ಕ್ಕಿಂತ ಹೆಚ್ಚು ಸ್ಥೂಲನಕ್ಷೆಗಳನ್ನು ಬಿಡಿಸಿದರು. ಛಾಯಾಗ್ರಹಣವನ್ನು ಮಹೇಶ್ ಲಿಮಯೆ ನಿರ್ವಹಿಸಿದರು. ಚಿತ್ರೀಕರಣದ ವೇಳೆ ಸೋನು ಸೂದ್ ತಮ್ಮ ಮೂಗನ್ನು ಮುರಿದುಕೊಂಡರು. ಎಸ್. ವಿಜಯನ್ ಚಿತ್ರದ ಸಾಹಸ ನಿರ್ದೇಶಕರಾಗಿದ್ದರು ಮತ್ತು ಚಿತ್ರವು ಸುಮಾರು ಐದು ಸಾಹಸ ದೃಶ್ಯರೂಪಗಳನ್ನು ಒಳಗೊಂಡಿತ್ತು. ಹಾಡುಗಳ ನೃತ್ಯವನ್ನು ರಾಜು ಖಾನ್ ಮತ್ತು ಶಬೀನಾ ಖಾನ್ ನಿರ್ದೇಶಿಸಿದ್ದರು. "ಮುನ್ನಿ ಬದನಾಮ್ ಹುಯಿ" ಹಾಡನ್ನು ಫ಼ಾರಾ ಖಾನ್ ನಿರ್ದೇಶಿಸಿದರು. ಚಿತ್ರೀಕರಣವು ಜೂನ್ ೨೦೧೦ರಲ್ಲಿ ಮುಗಿಯಿತು. == ಸಂಗೀತ == ಧ್ವನಿವಾಹಿನಿ ಸಂಪುಟವನ್ನು ಸಂಗೀತ ನಿರ್ದೇಶಕ ಜೋಡಿ ಸಾಜಿದ್-ವಾಜಿದ್ ಮತ್ತು ಲಲಿತ್ ಪಂಡಿತ್ ಸಂಯೋಜಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ಫ಼ೇಯ್‍ಜ಼್ ಅನ್ವರ್, ಲಲಿತ್ ಪಂಡಿತ್ ಮತ್ತು ಜಲೀಸ್ ಶೇರ್ವಾನಿ ಬರೆದರು. "ಮುನ್ನಿ ಬದನಾಮ್ ಹುಯಿ" ಹಾಡನ್ನು ಲಲಿತ್ ಪಂಡಿತ್ ಬರೆದು ಸಂಯೋಜಿಸಿದರು. ಧ್ವನಿವಾಹಿನಿ ಸಂಗ್ರಹವನ್ನು ೨೧ ಆಗಸ್ಟ್ ೨೦೧೦ರಂದು ದೆಹಲಿಯಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂಗ್ರಹವು ಐದು ಅಸಲಿ ಹಾಡುಗಳು, ನಾಲ್ಕು ರೀಮಿಕ್ಸ್‌ಗಳು ಮತ್ತು ಒಂದು ಥೀಮ್ ಹಾಡನ್ನು ಹೊಂದಿತ್ತು. ಆಡಿಯೋ ಹಕ್ಕುಗಳನ್ನು ಟೀ-ಸೀರೀಸ್‍ಗೆ ಸುಮಾರು ₹90 ದಶಲಕ್ಷಕ್ಕೆ ಮಾರಾಟ ಮಾಡಲಾಯಿತು. "ಮುನ್ನಿ ಬದನಾಮ್ ಹುಯಿ" ಹಾಡು ಒಂದು ಹಳೆಯ ಭೋಜಪುರಿ ಜಾನಪದ ಗೀತೆಯಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗಿದೆ. ನಿರ್ದೇಶಕ ಅಭಿನವ್ ಕಶ್ಯಪ್ ಈ ಜನಪದ ಗೀತೆಯನ್ನು ಬಳಸಿಕೊಳ್ಳಲು ಒಪ್ಪಿಕೊಂಡು ಆ ಹಾಡನ್ನು ಚಿತ್ರದ ಅಗತ್ಯಕ್ಕೆ ಹೊಂದುವಂತೆ ಅಸಂಕಲ್ಪಿತವಾಗಿ ಪುನಃ ಬರೆದು ಸಂಯೋಜಿಸುವಂತೆ ಹೇಳಿದರು. ಇದು ಒಂದು ಪಾಕಿಸ್ತಾನಿ ಹಾಡಿನಿಂದ ಸ್ಫೂರ್ತಿ ಪಡೆದಿದೆ ಎಂದು ಆರೋಪಿಸಲಾಯಿತು. ದಬಂಗ್‍ನ ಧ್ವನಿವಾಹಿನಿಯು ಸಂಗೀತ ವಿಮರ್ಶಕರಿಂದ ಬಹುತೇಕವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. == ಬಿಡುಗಡೆ == ದಬಂಗ್ ವಿಶ್ವಾದ್ಯಂತ ೧೦ ಸೆಪ್ಟೆಂಬರ್ ೨೦೧೦ರಂದು ಬಿಡುಗಡೆಯಾಯಿತು. ಚಿತ್ರದ ಡಿವಿಡಿಗಳು ಮತ್ತು ವಿಸಿಡಿಗಳನ್ನು ರಿಲಾಯನ್ಸ್ ಬಿಗ್ ಹೋಂ ವೀಡಿಯೊ ೧೨ ಅಕ್ಟೋಬರ್ ೨೦೧೦ರಂದು ಬಿಡುಗಡೆ ಮಾಡಿತು. ಈ ಚಿತ್ರವನ್ನು ಭಾರತದ ಪ್ರೇಕ್ಷಕರಿಗಾಗಿ ಉಚಿತ ವೀಕ್ಷಣೆಗಾಗಿ ೨೮ ಜನವರಿ ೨೦೧೧ರಂದು ಯೂಟ್ಯೂಬ್‌‍ನಲ್ಲಿ ಬಿಡುಗಡೆ ಮಾಡಲಾಯಿತು. ಉಪಗ್ರಹ ಹಕ್ಕುಗಳನ್ನು ಕಲರ್ಸ್ ವಾಹಿನಿಗೆ ₹100 ದಶಲಕ್ಷಕ್ಕೆ ಪೂರ್ವಮಾರಾಟ ಮಾಡಲಾಗಿತ್ತು. ಎರಡೂವರೆ ನಿಮಿಷ ಅವಧಿಯ ದಬಂಗ್‍ನ ಚಿತ್ರಮಂದಿರದ ಟ್ರೇಲರ್‌ನ್ನು ೨೩ ಜುಲೈ ೨೦೧೦ರಂದು ಬಿಡುಗಡೆ ಮಾಡಲಾಯಿತು. == ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ == === ವಿಮರ್ಶಾತ್ಮಕ ಪ್ರತಿಕ್ರಿಯೆ === ಈ ಚಿತ್ರವು ವಿಮರ್ಶಕರಿಂದ ಬಹುತೇಕವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಹೆಚ್ಚಿನ ವಿಮರ್ಶಕರು ಸಲ್ಮಾನ್ ಖಾನ್‍ನ ಅಭಿನಯವನ್ನು ಪ್ರಶಂಸಿಸಿದರು. === ಬಾಕ್ಸ್ ಆಫ಼ಿಸ್ === ಭಾರತದಲ್ಲಿ ಈ ಚಿತ್ರದ ಒಟ್ಟಾರೆ ಹಣಗಳಿಕೆ ₹1.41 ಶತಕೋಟಿಯಷ್ಟಾಗಿತ್ತು (ಅಮೇರಿಕನ್ $20 ದಶಲಕ್ಷ). ==== ವಿದೇಶದಲ್ಲಿ ==== ದಬಂಗ್ ವಿದೇಶದಲ್ಲೂ ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ತೆರೆಯಿತು. ವಿದೇಶದಲ್ಲಿ ಚಿತ್ರದ ಅಂತಿಮ ಹಣಗಳಿಕೆಯು ಅಮೇರಿಕನ್ $6.10 ದಶಲಕ್ಷದಷ್ಟಾಗಿತ್ತು. == ವಿವಾದಗಳು == "ಮುನ್ನಿ ಬದನಾಮ್ ಹುಯಿ" ಹಾಡಿನ ಸಾಹಿತ್ಯದಲ್ಲಿ 'ಜ಼ಂಡು ಬಾಮ್' ಎಂಬ ಹೆಸರಿನ ಛಾಪು ಸೇರಿತ್ತು. ಇದು ಈ ಛಾಪಿನ ತಯಾರಕರಾದ ಇಮಾಮಿಯನ್ನು ಅಸಮಾಧಾನಗೊಳಿಸಿತು. ವ್ಯಾಪಾರ ಚಿಹ್ನೆಯ ಪ್ರಕರಣವನ್ನು ಚಿತ್ರದ ನಿರ್ಮಾಪಕರು ಮತ್ತು ಇಮಾಮಿ ನ್ಯಾಯಾಲಯದ ಹೊರಗೆ ರಾಜಿಮಾಡಿಕೊಂಡರು. ನಂತರ ಜ಼ಂಡು ಬಾಮ್‍ನ್ನು ಪ್ರಚಾರಮಾಡುವ ಅಧಿಕೃತ ಜಾಹೀರಾತು ಪ್ರಚಾರಕ್ಕಾಗಿ ಮಲಾಯ್ಕಾ ಅರೋರಾರನ್ನು ಆಯ್ಕೆಮಾಡಲಾಯಿತು. ಈ ಹಾಡಿನಿಂದ "ಹಿಂದುಸ್ತಾನ್" ಶಬ್ದವನ್ನು ತೆಗೆಯಬೇಕೆಂದು ಬೇಡಿಕೆಯಿಟ್ಟು ಕಾರ್ಯಕರ್ತ ರಾಜ್‍ಕುಮಾರ್ ತಕ್ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವೊಂದನ್ನು ದಾಖಲಿಸಿದರು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ದಬಂಗ್ ಭಾರತದಲ್ಲಿನ ಪ್ರಮುಖ ಚಲನಚಿತ್ರ ಪ್ರಶಸ್ತಿ ಸಮಾರಂಭಗಳಲ್ಲಿ ಪ್ರಶಸ್ತಿ ಗೌರವಗಳನ್ನು ಪಡೆಯಿತು. ಅವುಗಳ ಪೈಕಿ, ಇದು ಹಿತಕರ ಮನೋರಂಜನೆ ಒದಗಿಸುವ ಅತ್ಯಂತ ಜನಪ್ರಿಯ ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು. ಇದು ೫೬ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಆರು ಪ್ರಶಸ್ತಿಗಳನ್ನು, ಏಳು ಸ್ಕ್ರೀನ್ ಪ್ರಶಸ್ತಿಗಳನ್ನು, ಒಂಭತ್ತು ಜ಼ೀ ಸಿನೆ ಪ್ರಶಸ್ತಿಗಳನ್ನು, ಮತ್ತು ಹತ್ತು ಐಫ಼ಾ ಪ್ರಶಸ್ತಿಗಳನ್ನು ಪಡೆಯಿತು. == ಉತ್ತರಭಾಗಗಳು == ದಬಂಗ್‍ನ ಬಿಡುಗಡೆಯ ನಂತರ ಇದರ ಉತ್ತರಭಾಗವನ್ನು ಯೋಜಿಸುತ್ತಿರುವುದಾಗಿ ಅರ್ಬಾಜ಼್ ಖಾನ್ ಘೋಷಿಸಿದರು. ನಿರ್ದೇಶಕ ಅಭಿನವ್ ಕಶ್ಯಪ್ ಉತ್ತರಭಾಗವನ್ನು ನಿರ್ದೇಶಿಸಲಿಲ್ಲ. ಹಾಗಾಗಿ ಅರ್ಬಾಜ಼್ ಚಿತ್ರದ ನಿರ್ದೇಶಕರಾದರು. ದಬಂಗ್ 2 ಡಿಸೆಂಬರ್ ೨೦೧೨ರಲ್ಲಿ ಬಿಡುಗಡೆಯಾಯಿತು. ಮತ್ತೊಂದು ಉತ್ತರಭಾಗವಾದ ದಬಂಗ್ 3 ಡಿಸೆಂಬರ್ ೨೦೧೯ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ದಬಂಗ್‍ನ ಪೂರ್ವಭಾಗ ಮತ್ತು ದಬಂಗ್ 2 ನ ಉತ್ತರ ಭಾಗ ಎರಡೂ ಆಗಿತ್ತು. ಹಾಗಾಗಿ ಕಥೆಯನ್ನು ಹಿಂದೆ ಮತ್ತು ಮುಂದೆ ತೆಗೆದುಕೊಂಡು ಹೋಗಲಾಯಿತು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ದಬಂಗ್ @ ಐ ಎಮ್ ಡಿ ಬಿ ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ದಬಂಗ್ (ಚಲನಚಿತ್ರ)